ಜನವಾಹಿನಿ News ಸಿದ್ದಾಪುರ : ಕಾಡ್ಗಿಚ್ಚು, ಅರಣ್ಯ ನಾಶ, ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ವನ್ಯ ಮೃಗಗಳ ಆವಾಸ ಸ್ಥಾನ ನಾಶ, ಆಹಾರ ಕೊರತೆ ಮುಂತಾದ ಕಾರಣಗಳಿಂದ ಆಹಾರ ಅರಸಿ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವಂತಾಗಿದೆ. ಹೀಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇದ್ದರೆ ಮಾತ್ರ ನಮ್ಮನು ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವೆಂದು ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವೃಷಿನಿ ರವರ ನಿರ್ದೇಶನದಲ್ಲಿ ವಿರಾಜಪೇಟೆ ವಿಭಾಗದ ತಿತಿಮತಿ ವಲಯ ವತಿಯಿಂದ ಹ್ಯೂಮನ್ ವರ್ಲ್ಡ್ ಪಾರ್ ಅನಿಮಲ್ಸ್ ಸಂಸ್ಥೆ ಮತ್ತು ಟಾಟಾ ಕಾಫಿ ಸಂಸ್ಥೆ ಪಾಲಿಬೆಟ್ಟ ಇವರ ಸಹಯೋಗದಲ್ಲಿ ಟಾಟಾ ಕಾಫಿ ಸಂಸ್ಥೆಯ ಎಮ್ಮೆಗುಂಡಿ, ಹೊಸಹಳ್ಳಿ ಹಾಗೂ ಮಾರ್ಗೋಳ್ಳಿ ಎಸ್ಟೇಟ್ ಗಳಲ್ಲಿ ಆಯೋಜಿಸಲಾಗಿದ್ದ ಮಾನವ ವನ್ಯಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುವ ಕುರಿತಾದ ಜನ ಜಾಗೃತಿ ಬೀದಿ ನಾಟಕ ಪ್ರದರ್ಶದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಮಿಕ ವರ್ಗದವರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಪ್ರತಿ ದಿನ ಎಚ್ಚರಿಕೆಯಿಂದ ಇರಬೇಕು.
ಕಾಡಾನೆಗಳು ಕಂಡು ಬಂದ ತಕ್ಷಣ ಇಲಾಖೆ ಅಥವಾ ತೋಟದ ಮುಖ್ಯಸ್ಥರು ಅಥವಾ ತೋಟದ ರೈಟರ್ ಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು ಮಾನವ ಕಾಡುಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಉಪ ವಲಯ ಅರಣ್ಯಾಧಿಕಾರಿ ಶಶಿ.ಪಿ.ಟಿ ಉಸ್ತುವಾರಿಯಲ್ಲಿ ಫೆ.17 ಹಾಗೂ 18ರಂದು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ, ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ, ಟಾಟಾ ಕಾಫಿ ಸಂಸ್ಥೆಯ ಡಿಜಿಎಂ ಗಳಾದ ಸಿ ಎ ಬೋಪಯ್ಯ ಮತ್ತು ದಿಲೀಪ್ ಕುಮಾರ್ ಸಿಂಗ್, ಸಿನಿಯರ್ ಮೇನೇಜರ್ ಎಂ ಎನ್ ತಮ್ಮಯ್ಯ, ಟಾಟಾ ಕಾಫಿ ಸಂಸ್ಥೆಯ ಸುರಕ್ಷತೆ ಮತ್ತು ವನ್ಯಜೀವಿ ವಿಭಾಗದ ವ್ಯವಸ್ಥಾಪಕ ಕಾರ್ತೀಕ್ ಕೃಷ್ಣ, ಹ್ಯೂಮನ್ ವರ್ಲ್ಡ್ ಪಾರ್ ಅನಿಮಲ್ಸ್ ಸಂಸ್ಥೆಯ ತಮ್ಮಯ್ಯ ಮತ್ತು ವಿನೋದ ಟಾಟಾ ಕಾಫಿ ಸಂಸ್ಥೆಯ ಎಲ್ಲಾ ಎಸ್ಟೇಟ್ ಡೇಪ್ಯುಟಿ ಮ್ಯಾನೇಜರ್ ಸುಬ್ಬಯ್ಯ ಅಸಿಸ್ಟೆಂಟ್ ಮ್ಯಾನೇಜರ್ ಅನುಶ್ ಆನೆ ಟ್ರಾಕರ್ ಗಳು ಮತ್ತು ಎಲ್ಲಾ ಎಸ್ಟೇಟ್ ಕಾರ್ಮಿಕರು ಮಕ್ಕಳು ಶುಶ್ರೂಷೆ ನರ್ಸ್ ಗಳು ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಮೈಸೂರಿನ ಯೋಗಾನಂದ ನಾಯಕತ್ವದ ಪೃಥ್ವಿ ಕಲಾ ತಂಡದ ಕಲಾವಿದರು ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಿದರು.







