ಜನವಾಹಿನಿ News ಸಿದ್ದಾಪುರ : ಒಂಟಿ ಸಲಗವೊಂದು ಬೈಕ್ ಮೇಲೆ ದಾಳಿ ನಡೆಸಿದ ಪರಿಣಾಮ ಬೈಕ್ ಜಖಂಗೊಂಡಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ವ್ಯಾಪ್ತಿಯ ಚೌಡಿಕಾಡುವಿನಲ್ಲಿ ನಡೆದಿದೆ.
ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಇವೊಲ್ವ್ ಬ್ಯಾಕ್” ಸಂಸ್ಥೆಯ ಹಿಲ್ ಕಿಲ್ ಗ್ರೂಪ್ಸ್ ಗೆ ಸೇರಿದ ಚೌಡಿ ಕಾಡ್ ಕಾಫಿ ತೋಟದಿಂದ ಕರ್ತವ್ಯ ಮುಗಿಸಿ ತಮ್ಮ ವಸತಿ ಗೃಹಕ್ಕೆ ತೆರಳುತ್ತಿದ್ದ ಸಿಬ್ಬಂದಿಗಳ ಬೈಕ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಸಿಬ್ಬಂದಿಗಳು ಬೈಕ್ ಬಿಟ್ಟು ಓಡಿದ್ದಾರೆ. ಘಟನೆಯಲಿ ಬೈಕ್ ಜಖಂಗೊಂಡಿದ್ದು, ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರಂತರ ಕಾಡಾನೆ ಭೀತಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಲ್ಲದೆ ಪದೇ ಪದೇ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾರ್ಮಿಕರು ಹಾಗೂ ವಾಹನ ಸವಾರರ ಮೇಲೆ ದಾಳಿ ನಡೆಸುತ್ತಿರುವ ಮಾಹಿತಿ ಇದ್ದರೂ ಕೂಡ ಇಲಾಖೆಯಿಂದ ಈವರೆಗೂ ಶಾಶ್ವತ ಪರಿಹಾರ ಕಲ್ಪಿಸಲು ಯಾವುದೇ ಕ್ರಮ ಕೈಗೊಳ್ಳದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು ಶೀಘ್ರದಲ್ಲೇ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ. ಸಾರ್ವಜನಿಕರು, ಸಂಘಸಂಸ್ಥೆಗಳ ಸಹಕಾರದೊಂದಿಗೆ ಅರಣ್ಯ ಇಲಾಖೆ ವಿರುದ್ಧ ತೀವ್ರ ತರಹದ ಹೋರಾಟ ನಡೆಸಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ.







