ಜನವಾಹಿನಿ NEWS ಸಿದ್ದಾಪುರ : ಗುಹ್ಯ ಗ್ರಾಮದ ಕೂಡುಗದ್ದೆ ಕಾರ್ಗಿಲ್ ಬಾಯ್ಸ್ ವತಿಯಿಂದ 2ನೇ ವರ್ಷದ ಗೌರಿ ಗಣೇಶೋತ್ಸವ ಅಂಗವಾಗಿ ಇಲ್ಲಿನ ಹೊಳೆಕೆರೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ನೆಲ್ಯಹುದಿಕೇರಿ ಸತ್ಯನಾರಾಯಣ ದೇವಾಲಯದ ಅರ್ಚಕರಾದ ರಾಘವೇಂದ್ರ ರವರ ನೇತೃತ್ವದಲ್ಲಿ ಬೆಳಗ್ಗೆಯಿಂದ ಗಣಪನಿಗೆ ಹೋಮ, ಮಂಗಳಾರತಿ, ವಿಶೇಷ ಪೂಜಾ ಕೈಂಕರ್ಯ ನಡೆಯಿತು.
ಗುಹ್ಯ ಸಿದ್ದಾಪುರ ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಜನ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಪೂಜೆ ಬಳಿಕ ಮೂರ್ತಿಗಳನ್ನು ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ಮೆರವಣಿಗೆಯಲ್ಲಿ ಸಾಗಿಸಿ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಗಣಪತಿ ಬಪ್ಪ ಮೋರಿಯ ಎಂಬ ಘೋಷ ಎಲ್ಲೆಡೆ ಮೊಳಗಿತು. ಮೆರವಣಿಗೆ ವೇಳೆ ಮಳೆಯ ನಡುವೆಯೂ ಮಹಿಳೆಯರು ಮಕ್ಕಳು ಯುವಕರು ಡಿಜೆಗೆ ಹೆಜ್ಜೆ ಹಾಕು ಮೂಲಕ ಸಂಭ್ರಮದಿಂದ ಗಣಪನಿಗೆ ಬೀಳ್ಕೊಟ್ಟರು.
ಸೌಹಾರ್ದತೆಗೂ ಸಾಕ್ಷಿಯಾದ ಗಣೇಶ ಮೆರವಣಿಗೆ:
ಗುಹ್ಯ ಬಿಲಾಲ್ ಜುಮ್ಮಾ ಮಸೀದಿ ವತಿಯಿಂದ ಗೌರಿ ಗಣೇಶ ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಕಾಫಿ, ತಿಂಡಿ ತಿನಿಸುಗಳನ್ನು ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದ ಪ್ರಸಂಗ ಕಂಡುಬಂತು.








