ಕೊಡಗು ಗೌಡ ಸಮಾಜದ ಮುಖಂಡರಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಅಭಿನಂದನೆ
ಮಡಿಕೇರಿ : ಕೊಡಗು ಗೌಡ ಸಮಾಜದ ಮುಖಂಡರಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ನಿಯೋಗವು ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ನೀಡಿದ ಮನವಿಗೆ ಸ್ಪಂದಿಸಿ, ಸಮುದಾಯ ಭವನ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರು ಮಾಡುವ ಭರವಸೆ ನೀಡಿದ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಕಚೇರಿಗೆ ಭೇಟಿ ನೀಡಿದ ಕೊಡಗು ಗೌಡ ಸಮಾಜದ ಮುಖಂಡರು ಶಾಸಕರಿಗೆ ಧನ್ಯವಾದ ಅರ್ಪಿಸಿದರು.
ಬಳಿಕ ಮಾತನಾಡಿದ ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ, ಈ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ, ಗೌಡ ಸಮಾಜಕ್ಕೆ 75 ಲಕ್ಷ ಗಳನ್ನು ನೀಡಿದ್ದರು. ಇಲ್ಲಿಯ ತನಕ ನಮ್ಮ ಅರೆ ಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆಯ ಗೌಡ ಜನಾಂಗಕ್ಕೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಪೈಸಾರಿ ಜಾಗದಲ್ಲಿ ಖಾಲಿ ಇರುವ 13 ಎಕರೆ ಜಾಗವನ್ನು, ಕೊಡಗು ಗೌಡ ಸಮಾಜ – ಮಡಿಕೇರಿ, ಇವರಿಗೆ ಮಂಜೂರು ಮಾಡಲು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಾಜದ ಪ್ರಮುಖರ ಬೇಡಿಕೆಯನ್ನು ಸಚಿವ ಸಂಪುಟದ ಮುಂದಿಟ್ಟು, ಮುಂದಿನ ದಿನಗಳಲ್ಲಿ ಮಂಜೂರು ಮಾಡುವ ಭರವಸೆ ನೀಡಿದರು.
ಸಮಾಜದ ಇನ್ನಿತರ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಶಾಸಕರು, ಸಮಾಜದ ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಗೌಡ ಸಮಾಜದ ಪ್ರಮುಖರಾದ ಸೋಮಣ್ಣ, ಗಿರೀಶ್, ಬಿ.ಎಸ್.ಆನಂದ್, ರಾಜೇಂದ್ರ, ಅನಂತ್ ಕುಮಾರ್, ವಸಂತ, ಸಂದೀಪ್, ಸೀತಾರಾಮ್, ದಮಯಂತಿ ಮುಂತಾದ ಮುಖಂಡರು ಉಪಸ್ಥಿತರಿದ್ದರು.








