ಜನವಾಹಿನಿ NEWS ಸೋಮವಾರಪೇಟೆ : ತಾಲೂಕಿನ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಸೋಮವಾರಪೇಟೆ ಯಿಂದ ಶ್ರೀಕ್ಷೇತ್ರ ಧರ್ಮಸ್ಥಳದವರೆಗೆ ಬೃಹತ್ ವಾಹನ ಜಾಥಾ ನಡೆಸಲಾಯಿತು. ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಜಾಥಗೆ ಚಾಲನೆ ದೊರೆತು, ಶನಿವಾರಸಂತೆ, ಕೊಡ್ಲಿಪೇಟೆ, ಶುಕ್ರವಾರಸಂತೆ, ದೋಣಿಗಲ್ಲು, ಗುಂಡ್ಯ ರಾಷ್ಟ್ರಿಯ ಹೆದ್ದಾರಿ ಮಾರ್ಗವಾಗಿ ಧರ್ಮಸ್ಥಳ ತಲುಪಿತು. ಸುಮಾರು150 ವಾಹನಗಳಲ್ಲಿ 500ಕ್ಕೂ ಹೆಚ್ಚು ಭಕ್ತರು ವಾಹನ ಜಾಥದಲ್ಲಿ ಪಾಲ್ಗೊಂಡು, ಬಳಿಕ ಧರ್ಮಸ್ಥಳದ ದೇವಾಲಯ ಆವರಣಕ್ಕೆ ಮೆರವಣಿಗೆ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದರು.ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನಂತರ ಸೋಮವಾರಪೇಟೆ ತಾಲೂಕು ಸಂಚಾಲಕ ಸುಭಾಷ್ ಮಾತನಾಡಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನ ಖಂಡಿಸಿ ಸೋಮವಾರಪೇಟೆ ಭಾಗದಿಂದ 150 ಹೆಚ್ಚು ವಾಹನದ ಮೂಲಕ 500 ಹೆಚ್ಚು ಭಕ್ತರಿಂದ ಜಾಗೃತಿ ಜಾತವನ್ನು ನಡೆಸಿದ್ದೇವೆ. ಎಸ್.ಐ.ಟಿ ತನಿಖೆಯೂ ಪ್ರಾಮಾಣಿಕವಾಗಿ ನಡೆಯಬೇಕು ಹಾಗೂ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ನಿವಾರಿಸಬೇಕೆಂಬ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು .
ನಂತರ ಸಮಿತಿ ಹಿರಿಯ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ ಸುಮಾರು 800 ವರ್ಷವಿರುವ ಧರ್ಮಸ್ಥಳದ ಮೇಲಿರುವ ಅಪನಂಬಿಕೆಯನ್ನು ಹೋಗಲಾಡಿಸಬೇಕು, ಸನಾತನ ಸಂಪ್ರದಾಯವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಈ ಜಾತವನ್ನು ಹಮ್ಮಿಕೊಂಡಿದ್ದೇವೆ. ಇದು ಏನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ ) ಯಿಂದ ತನಿಖೆ ಆಗಬೇಕು, ಅದರ ಮೂಲಕ ತಲೆ ಬುರುಡೆ ವಿಚಾರದಲ್ಲಿ ಮೂವರ ಜೊತೆ ಇನ್ನು ಯಾರ ಯಾರ ಕೈವಾಡವಿದೆ ಎಂಬುದು ಬಹಿರಂಗವಾಗಬೇಕು. ಅವರ ಮೇಲೆ ಕಾನೂನು ಕ್ರಮ ಆಗಬೇಕು ಎಂದರು.
ಈ ಸಂದರ್ಭ ತಾಲೂಕು ಸಹ ಸಂಚಾಲಕ ಶಶಿಕಾಂತ್ ಬಜೆಗುಂಡಿ, ಸಮಿತಿಯ ಸದಸ್ಯರಾದ ಸುನಿಲ್ ಮಾದಾಪುರ, ಬೋಜೆಗೌಡ, ಎಂ.ಬಿ.ಉಮೇಶ್ ಇದ್ದರು.
✒️ ಲಕ್ಷ್ಮಿಕಾಂತ್ ಕೊಮಾರಪ್ಪ








