Breaking News :

‘ನಾಯಕಂಡ ಬೇಬಿ ಚಿಣ್ಣಪ್ಪ ಅವರಿಗೆ ಸಂತಾಪ’


ಜನವಾಹಿನಿ News ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಿಧನರಾದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ, ಕವಯತ್ರಿ ನಾಯಕಂಡ ಬೇಬಿ ಚಿಣ್ಣಪ್ಪರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸರ್ವ ಸಮಿತಿ ಸಭೆಯಲ್ಲಿ ಬೇಬಿ ಚಿಣ್ಣಪ್ಪರ ಅನಿರೀಕ್ಷಿತವಾದ ನಿಧನಕ್ಕೆ ಕಂಬನಿ ಮಿಡಿಯಲಾಯಿತು.

ಈ ವೇಳೆ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಕೊಡವ ಕವನ, ಕತೆಗಳನ್ನು ಓದುಗರ ಮನ ಮಿಡಿಯುವ ರೀತಿಯಲ್ಲಿ ಬರೆಯುತ್ತಿದ್ದ ಬೇಬಿ ಚಿಣ್ಣಪ್ಪನವರ ಅಗಲಿಕೆ ಕೊಡವ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ. ಹಿರಿಯರ ಸ್ಥಾನದಲ್ಲಿದ್ದು, ಮಾರ್ಗದರ್ಶಕರಾಗಿದ್ದ ಇವರು ಕೊಡವ, ಕನ್ನಡ ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆಂದು ಹೇಳಿದರು.

ಹಿರಿಯ ಸದಸ್ಯರಾದ ನಾಪಂಡ ಗಣೇಶ್ ಮಾತನಾಡಿ, ಬೇಬಿ ಚಿಣ್ಣಪ್ಪನವರು ಮೃಧು ಸ್ವಭಾವದ ಹಿರಿಯ ಸಾಹಿತಿಗಳು, ಅಕಾಡೆಮಿಯ ಕಾರ್ಯಕ್ರಮಗಳೆಂದರೆ ಅಭಿಮಾನದಿಂದ ಪಾಲ್ಗೊಳ್ಳುತ್ತಿದ್ದರೆಂದರು.

ಕೊಂಡಿಜಮ್ಮನ ಎಂ.ಬಾಲಕೃಷ್ಣ ಮಾತನಾಡಿ, ಬೇಬಿ ಚಿಣ್ಣಪ್ಪನವರ ಅಗಲಿಕೆ ದುಃಖಕರ, ಹಿರಿಯರಾಗಿದ್ದು, ಮಾರ್ಗದರ್ಶಕರಾಗಿದ್ದರು ಎಂದರು.

ಸದಸ್ಯರಾದ ನಾಯಂದಿರ ಆರ್. ಶಿವಾಜಿ ಮಾತನಾಡಿ, ಬೇಬಿ ಚಿಣ್ಣಪ್ಪನವರು ಒಳ್ಳೆಯ ಸಾಹಿತಿಗಳು, ಸಾಹಿತ್ಯಪರ ಚಿಂತನೆಯೊಂದಿಗೆ ಅಕಾಡೆಮಿಯ ಕಾರ್ಯಕ್ರಮಗಳಿಗೆ ಬೆಂಬಲವಾಗಿದ್ದರು ಎಂದರು.

ಸದಸ್ಯರಾದ ಕುಡಿಯರ ಕಾವೇರಪ್ಪ ಮಾತನಾಡಿ, ಬೇಬಿ ಚಿಣ್ಣಪ್ಪ, ನಮಗೆಲ್ಲ ಹಿರಿಯರು, ಅವರ ಸಾಹಿತ್ಯ ಪರ ಚಿಂತನೆ ಅಕಾಡೆಮಿಯ ಕಾರ್ಯ ಚಟುವಟಿಕೆಗಳಿಗೆ ಸಹಕಾರಿಯಾಗಿತ್ತು ಎಂದರು.

ರಿಜಿಸ್ಟ್ರಾರ್ ಚಿನ್ನಸ್ವಾಮಿ ಹಾಗೂ ಅರ್ಥ ಸದಸ್ಯ ಕುಮಾರ ಸಂತಾಪ ವ್ಯಕ್ತಪಡಿಸಿದರು. ಸಭೆಯಲ್ಲಿ ಅಕಾಡೆಮಿಯ ಸದಸ್ಯರುಗಳಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಪುತ್ತರಿರ ಪಪ್ಪು ತಿಮ್ಮಯ್ಯ, ಪಾನಿಕುಟ್ಟಿರ ಕೆ.ಕುಟ್ಟಪ್ಪ ಹಾಗೂ ಅಕಾಡೆಮಿಯ ಸಿಬ್ಬಂದಿಗಳು ಹಾಜರಿದ್ದರು.

Share this article

ಟಾಪ್ ನ್ಯೂಸ್

More News