ಜನವಾಹಿನಿ News ಮಡಿಕೇರಿ : ಮತಾಂತರದ ವಿರುದ್ಧ ಮತ್ತು ಲವ್ ಜಿಹಾದ್ ಪ್ರಕರಣವನ್ನು ಖಂಡಿಸಿ ಜ.೨೭ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸುರಕ್ಷಾ ಸಮಿತಿ ಸಂಯೋಜಕ ಕುಕ್ಕೆರ ಅಜಿತ್ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರ, ನೆಲ್ಯಹುದಿಕೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಲ್ಕೈದು ಲವ್ ಜಿಹಾದ್ ಪ್ರಕರಣ ನಡೆದಿರುವ ಮಾಹಿತಿಯಿದೆ. ಈ ಹಿನ್ನೆಲೆ ಸಿದ್ದಾಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಅಂದು ಬೆಳಗ್ಗೆ ೧೦.೩೦ ಗಂಟೆಗೆ ಸಿದ್ದಾಪುರ ಅಯ್ಯಪ್ಪ ದೇವಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಸಾಗಲಿದೆ. ನಂತರ ೧.೩೦ ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಜನಾಕ್ರೋಶ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಲವ್ ಜಿಹಾದ್ ನಂತಹ ಘಟನೆಗಳನ್ನು ಹಿಂದೂ ಸಮಾಜ ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪ್ರಕರಣವನ್ನು ಗಂಭೀರವಾಗಿ ಹಿಂದೂ ಸಮಾಜ ತೆಗೆದುಕೊಂಡಿದ್ದು ಇದರ ವಿರುದ್ಧ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತದೆ. ಲವ್ ಜಿಹಾದ್ ವಿರುದ್ಧ ಆಯಾ ಸಮಾಜಗಳ ಮುಖಂಡರುಗಳು ತಮ್ಮ ಸಮಾಜದ ಹೆಣ್ಣುಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ರಕ್ಷಣೆ ನೀಡಬೇಕಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಲವ್ ಜಿಹಾದ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಹಿಂದೂ ಸಮಾಜವೇ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಲಿದೆ ಎಂದು ಎಚ್ಚರಿಸಿದರು.
ಹಿಂದೂ ಸುರಕ್ಷಾ ಸಮಿತಿ ಸಹ ಸಂಯೋಜಕರಾದ ಸಂತೋಷ್, ಪ್ರಮುಖರಾದ ಐನಂಡ ಲಾಲಾ ಅಯ್ಯಣ್ಣ, ವೈ.ಪಿ.ಬೋಜೆಗೌಡ, ಪಿ.ವಿ.ರಮೇಶ್, ಟಿ.ಎ.ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.








