ಜನವಾಹಿನಿ NEWS ಕರಾವಳಿ:
ಕೃಷಿ ಜಮೀನಿಗೆ ಕೊಳವೆ ಬಾವಿ ನಿರ್ಮಿಸಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಬಂಟ್ವಾಳ ತಾಲ್ಲೂಕು ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ, ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
‘ನಮ್ಮ ಮಾವನಿಗೆ ಪೆರುವಾಯಿ ಗ್ರಾಮದಲ್ಲಿ ಒಂದು ಎಕರೆ ಕೃಷಿ ಜಮೀನು ಇದ್ದು, ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕೊಳವೆ ಬಾವಿ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ಮಾವನಿಗೆ ವಯಸ್ಸಾಗಿದ್ದರಿಂದ ನಾನು ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ವಿಚಾರಿಸಿದಾಗ ನಿಮಗೆ ಕೊಳವೆಬಾವಿ ಉಚಿವಾಗಿ ಸಿಗುತ್ತದೆ. ಬೆಂಗಳೂರು ಆಫೀಸ್ಗೆ ಹತ್ತು ಸಾವಿರ ಕೊಡಲಿಕ್ಕೆ ಇದೆ. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತನ್ನಿ ಎಂದು ಅಧ್ಯಕ್ಷೆ ಹೇಳಿದ್ದರು’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು.
‘ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ ಅವರು ಬಿಲ್ಕಲೆಕ್ಟರ್ ವಿಲಿಯಂ ಅವರಿಗೆ ₹10 ಸಾವಿರ ಲಂಚದ ಹಣ ಪಡೆಯಲು ಸೂಚಿಸಿದ್ದರು. ₹10 ಸಾವಿರ ಲಂಚದ ಹಣ ಪಡೆಯುವಾಗ ನಾವು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್ಪಿಗಳಾದ ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ., ಇನ್ಸ್ಪೆಕ್ಟರ್ಗಳಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್., ರವಿ ಪವಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







