ಮಡಿಕೇರಿ : ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಸಹಯೋಗದಲ್ಲಿ ಜು.೨೭ರಂದು ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಅಪ್ಪಾಜ, ಅಂದು ೩೫ ವರ್ಷ ಮೇಲ್ಪಟ್ಟವರಿಗೆ(ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆ) ಮತ್ತು ಕಬ್ಬಿಣಾಂಶದ ಪೋಲಿಕ್ ಆಮ್ಲ ಮಾತ್ರೆ ಹಾಗೂ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಅಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಮಡಿಕೇರಿ ನಗರದ ಪೌರಕಾರ್ಮಿಕರು ಮತ್ತು ಕಾರ್ಮಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರದ ಸದುಪಯೋಗ ಪಡೆಯಲಿಚ್ಚಿಸುವ ಕಾರ್ಮಿಕರು ಹಳೆಯ ವೈದ್ಯಕೀಯ ದಾಖಲೆಗಳಿದ್ದಲ್ಲಿ ಕಡ್ಡಾಯವಾಗಿ ತರಬೇಕು. ಅರ್ಹ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ ಮಾತನಾಡಿ, ಸಂಸ್ಥೆಯು ಸಂಸ್ಕೃತಿ, ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಈ ಹಿಂದೆ ಎರೆಡು ಉಚಿತ ಶಿಬಿರವನ್ನು ಯಶಸ್ವಿಯಾಗಿ ನಡೆಸಿದೆ. ಜು.೨೭ರಂದು ನಡೆಯುವ ಉಚಿತ ವೈದ್ಯಕೀಯ ಶಿಬಿರಕ್ಕೆ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ನ ಉಪಾಧ್ಯಕ್ಷೆ ನಿಶಾಮೋಹನ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಟ್ರಸ್ಟಿ ಕೆ.ಎಂ.ಬಿ.ಗಣೇಶ್, ಸದಸ್ಯರಾದ ಡೆನ್ನಿ ಬರೋಸ್ ಸುದ್ದಿಗೋಷ್ಠಿಯಲ್ಲಿದ್ದರು.








