Breaking News :

ಜ.10, 11ರಂದು ಎಸ್‌ಆರ್‌ವಿ ಕನೆಕ್ಟ್-ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ


ಜನವಾಹಿನಿ News ಮಡಿಕೇರಿ : ಶ್ರೀ ರಾಜೇಶ್ವರಿ ವಿದ್ಯಾಲಯ ಮತ್ತು ವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಎಸ್‌ಆರ್‌ವಿ ಕನೆಕ್ಟ್-ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ಜ.೧೦,೧೧ ರಂದು ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಜೇಶ್ವರಿ ವಿದ್ಯಾಲಯ ಅಧ್ಯಕ್ಷ ಗೋವಿಂದರಾಜ್ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ರಾಜೇಶ್ವರಿ ವಿದ್ಯಾಲಯದಲ್ಲಿ ೧೯೯೧ ಬ್ಯಾಚ್‌ನಿಂದ ೨೦೨೪ರವರೆಗೆ ಸುಮಾರು ೪,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ದೃಷ್ಠಿಯಿಂದ ಎಸ್‌ಆರ್‌ವಿ ಕನೆಕ್ಟ್-ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಆದ್ದರಿಂದ ೧೯೯೧ ಬ್ಯಾಚ್‌ನಿಂದ ೨೦೨೪ರವರೆಗಿನ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಪಾಳ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಶ್ರೀ ರಾಜೇಶ್ವರಿ ವಿದ್ಯಾಲಯ ಮ್ಯಾನೆಜಿಂಗ್ ಟ್ರಸ್ಟಿ ಮತ್ತು ಕಾರ್ಯದರ್ಶಿ ಸಚಿನ್ ವಾಸುದೇವ್ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಗೆ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳು ಹಮ್ಮಿಕೊಳ್ಳಲಾಗಿದೆ. ಕ್ರಿಕೆಟ್ ೮ ಪ್ರಾಂಚೈಸಿ, ವಾಲಿಬಾಲ್ ೮ ಪ್ರಾಂಚೈಸಿಗಳಿದೆ. ಅಲ್ಲದೇ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ.೧೧ ರಂದು ನಗರದ ಹೊಟೇಲ್ ರಾಜ್ದರ್ಶನ್‌ನಲ್ಲಿ ಹಳೆ ವಿದ್ಯಾರ್ಥಿಗಳಿಗಾಗಿ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಮುಕ್ತ ಫುಟ್ಬಾಲ್: ಸಾರ್ವಜನಿಕರಿಗೆ ೫ಎ ಸೈಡ್ ಪುರುಷರ ಮುಕ್ತ ಫುಟ್ಬಾಲ್ ಪಂದ್ಯಾಟ ಆಯೋಜಿಸಲಾಗಿದೆ. ಈಗಾಗಲೇ ೧೨ ಪ್ರಾಂಚೈಸಿಗಳಿದ್ದು, ಆಟಗಾರರನ್ನು ಬಿಡ್ಡಿಂಗ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿಜೇತ ತಂಡಕ್ಕೆ ೩೫,೦೦೦ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೨೫,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅಲದೇ, ೧೬ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಶಾಲಾ ಮಟ್ಟದಲ್ಲಿ ಫುಟ್ಬಾಲ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷರಾಗಿ ಪ್ರದೀಪ್ ಕರ್ಕೆರ: ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲು, ಶಾಲಾ ಮನೋಭಾವವನ್ನು ಉತ್ತೇಜಿಸಲು ಮತ್ತು ಹಳೆಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯವನ್ನು ಬಲಪಡಿಸಲು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ಸಲುವಾಗಿ ಶ್ರೀ ರಾಜೇಶ್ವರಿ ಹಳೆ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ಪ್ರದೀಪ್ ಕರ್ಕೆರ, ಉಪಾಧ್ಯಕ್ಷರಾಗಿ ಪಂಕಜ, ಕಾರ್ಯದರ್ಶಿಯಾಗಿ ಎಂ.ಜಿ.ಲೋಹಿತ್, ಖಜಾಂಚಿಗಳಾಗಿ ನಿರಂಜನ್ ಮತ್ತು ನಿವ್ಯ ಕಾವೇರಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಿತಿ ಸದಸ್ಯಗಳಾಗಿ ಹರೀಶ್, ಕವನ್, ಭೂತಾನೀಸ್, ಚರಣ್ ಕುಮಾರ್, ಎಂ.ಜಿ.ಅನುಷಾ, ಅಕೀಬ್, ಎಸ್.ಎ.ಸುಬ್ರಮಣಿ, ಬಿ.ಎಂ.ಜೈದ್, ರಾಬಿನ್, ರಮ್ಯಾ, ಮೊಹಮ್ಮದ್ ಕೈಫ್, ಸುಹೈಲ್, ಜೈನುಲ್ ಅಬ್ದಿ, ಸುನಿಲ್, ವಾಹಿದ್, ಸುಜಿತ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಕರ್ಕೆರ, ಖಜಾಂಚಿಯಾದ ಬೊಟ್ಟೋಳಂಡ ನಿವ್ಯ ಕಾವೇರಮ್ಮ, ನಿರಂಜನ್, ಸದಸ್ಯರಾದ ಎಂ.ಎಂ.ಚರಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

 

 

 

 

Share this article

ಟಾಪ್ ನ್ಯೂಸ್

More News