ಪಹಲ್ಗಾಮ್ ದಾಳಿಯ ರೂವಾರಿ ಸೇರಿ ಮೂವರು ಉಗ್ರರರನ್ನು ಬೇಟೆಯಾಡಿದ ಭದ್ರತಾ ಪಡೆ..! ಭದ್ರತಾ ಪಡೆಗೆ ಉಗರರ ಸುಳಿವು ಹೇಗೆ ಸಿಕ್ತು.?..ಕಾರ್ಯಾಚರಣೆಗೆ ಆಪರೇಷನ್ ಮಹಾದೇವ ಹೆಸರಿಡಲು ಕಾರಣವೇನು..? ಇಲ್ಲಿದೆ ಕಂಪ್ಲೀಟ್ ಮಾಹಿತಿ
ನವದೆಹಲಿ : ಶ್ರೀನಗರದ ನಗರದ ಹೊರವಲಯದ ಮಹಾದೇವ ಬೆಟ್ಟ ಶ್ರೇಣಿಯ ದಾಚೀಗಾಮ್ನಲ್ಲಿ ‘ಆಪರೇಷನ್ ಮಹಾದೇವ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಯ ಸಿಬ್ಬಂದಿಗಳು, ಪಹಲ್ಗಾಮ್ ದಾಳಿಯ ರೂವಾರಿ ಸೇರಿದಂತೆ ಪಾಕಿಸ್ತಾನದ ಮೂವರು ಉಗ್ರರನ್ನು ಬೇಟೆಯಾಡಿದ್ದಾರೆ.
ಮೃತ ಉಗ್ರರನ್ನು ಹಸೀಮ್ ಮುಸಾ ಅಲಿಯಾಸ್ ಸುಲೇಮಾನ್, ಪಾಕಿಸ್ತಾನದ ಯಾಸಿರ್ ಹಾಗೂ ಅಬು ಹವ್ವಾ ಎಂದು ಗುರುತಿಸಲಾಗಿದೆ. ಉಗ್ರ ಹಸೀಮ್ ಅಲಿಯಾಸ್ ಸುಲೇಮಾನ್ ಏಪ್ರಿಲ್ 22ರಂದು ಪಹಲ್ಲಾಮ್ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ರೂವಾರಿಯಾಗಿದ್ದ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಹಲ್ಲಾಮ್ನಲ್ಲಿ ಉಗ್ರರು ಬಳಸಿದ್ದ ಸಾಧನವನ್ನೇ ಹೋಲುವ ತಾಂತ್ರಿಕ ಸಿಗ್ನಲ್ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನಾರ್ ಗ್ರಾಮ ಹಾಗೂ ಹರ್ವನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ವಿಶೇಷ ಘಟಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರರನ್ನು ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳದಿಂದ ಒಂದು ಎಂ-4 ಕಾರ್ಬೈನ್ ರೈಫಲ್, 2 ಎಕೆ-ರೈಫಲ್ಗಳು ಹಾಗೂ ಮದ್ದು-ಗುಂಡು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಕಾಶ್ಮೀರ ವಲಯದ ಐಜಿಪಿ ಬಿದ್ರಿ ತಿಳಿಸಿದ್ದಾರೆ.
ಸ್ಯಾಟಲೈಟ್ ಫೋನ್ನ ಸಿಗ್ನಲ್ನ ಸಹಾಯದಿಂದಾಗಿ ಭದ್ರತಾ ಪಡೆಗಳು ಪಹಲ್ಲಾಮ್ ದಾಳಿ ನಡೆಸಿದ್ದ ಉಗ್ರರ ಜಾಲವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಪಹಲ್ಲಾಮ್ನಲ್ಲಿ ಲಷ್ಕರ್-ಎ-ತಯಬಾ ಉಗ್ರರು ಬಳಸಿದ್ದ ಹುವಾಯಿ ಸ್ಯಾಟಲೈಟ್ ಫೋನ್ ದಾಳಿಯ ಬಳಿಕ ಸ್ತಬ್ಧಗೊಂಡಿತ್ತು. ದಾಳಿ ನಡೆದ ಮೂರು ತಿಂಗಳ ಬಳಿಕ ಎರಡು ದಿನಗಳ ಹಿಂದಷ್ಟೇ ಫೋನ್ ಸಕ್ರಿಯವಾಗಿದೆ. ಭದ್ರತಾ ಪಡೆಗಳು ಫೋನ್ ಸಿಗ್ನಲ್ ಸುಳಿವು ಹಿಡಿದು ಹೊರಟಾಗ ದಾಚೀಗಾಮ್ನ ಅರಣ್ಯ ಪ್ರದೇಶದಲ್ಲಿನ ಉಗ್ರರ ಜಾಲ ಪತ್ತೆಯಾಯಿತು ಎಂದು ಮೂಲಗಳು ತಿಳಿಸಿವೆ.








