Breaking News :

ಪ್ರೀತಿಸಿದ ಯುವತಿಯನ್ನೇ ಸುಟ್ಟು ಹಾಕಿದ ಭೂಪ : ಕೊಲೆಯಾದ ಯುವತಿ 8 ತಿಂಗಳ ಗರ್ಭಿಣಿ 

 


ಚಿತ್ರದುರ್ಗ : ತಾಲ್ಲೂಕಿನ ಗೋನೂರು ಬಳಿ ಕೊಲೆಯಾದ ಪದವಿ ವಿದ್ಯಾರ್ಥಿನಿ ವರ್ಷಿತಾ ಕೊಲೆ ಕೇಸ್ಗೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ಮುಂದೆ ಕೊಲೆ ರಹಸ್ಯ ಆರೋಪಿ ಚೇತನ್ ಬಾಯ್ಬಿಟ್ಟಿದ್ದಾನೆ. ಯುವತಿಯನ್ನ ಗರ್ಭಿಣಿ ಮಾಡಿ ಮೋಸ ಮಾಡಲು ಆರೋಪಿ ಮುಂದಾಗಿದ್ದ. ನಿನ್ನಿಂದ ಗರ್ಭಿಣಿ ಆಗಿದ್ದೇನೆ, ಈಗ ಮದುವೆ ಆಗು ಎಂದು ಯುವತಿ ಪಟ್ಟು ಹಿಡಿದಿದ್ದಾಳೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದೊಯ್ದ  ಚೇತನ್ ಮದುವೆ ಆಗಲು ಆರೋಪಿ ನಿರಾಕರಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ನಿನಗೆ ಬೇರೋಬ್ಬನ ಜೊತೆ ಸಂಬಂಧ ಇದೆ ಎಂದು ಆರೋಪಿ ಚೇತನ್, ಹಲ್ಲೆ ಮಾಡಿ, ಯುವತಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಬಳಿಕ ಪೆಟ್ರೋಲ್ ಹಾಕಿ ಶವವನ್ನು ಸುಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದ್ದಾರೆ.

‘ಮರಣೋತ್ತರ ಪರೀಕ್ಷೆಯ ವೇಳೆ 8 ತಿಂಗಳ ಭ್ರೂಣ ಪತ್ತೆಯಾಗಿದೆ. ವರದಿ ಇನ್ನೂ ಬರಬೇಕಿದೆ. ಕಳೆದ 10 ತಿಂಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ವಿಚಾರ ಬಂದಾಗ ಆರೋಪಿ ಕೊಲೆ ಮಾಡುವ ಸಂಚು ರೂಪಿಸಿದ್ದ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗಂಗಾವತಿಯ ಮಲ್ಟಿ ನೆಟ್‌ವರ್ಕಿಂಗ್‌ ಕಂಪನಿಯೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಉದ್ಯೋಗಾಕಾಂಕ್ಷಿಗಳನ್ನು ಕಂಪನಿಗಳ ಸಂಪರ್ಕಕ್ಕೆ ತರುವುದು ಈತನ ಕೆಲಸವಾಗಿತ್ತು. ಇನ್‌ಸ್ಟಾಗ್ರಾಂನಲ್ಲಿ ವರ್ಷಿತಾ ಅವರನ್ನು ಪರಿಚಯ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಪರಿಚಯ ಪ್ರೀತಿಗೆ ತಿರುಗಿತ್ತು. ನಗರದ ಕೆಳಗೋಟೆ ನಿವಾಸಿಯಾದ ಈತ ಆಗಾಗ ವಿದ್ಯಾರ್ಥಿನಿಯನ್ನು ಭೇಟಿಯಾಗುತ್ತಿದ್ದ’ ಎಂದು ಮಾಹಿತಿ ನೀಡಿದರು.

‘ಆ.18ರಂದು ಮಧ್ಯಾಹ್ನ 3.30ರ ವೇಳೆಯಲ್ಲಿ ಕೊಲೆ ಮಾಡಿದ್ದ ಆರೋಪಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ. ಮಳೆ ಸುರಿಯುತ್ತಿದ್ದ ಕಾರಣ ಬೆಂಕಿ ನಂದಿ ಹೋಗಿತ್ತು. ಹೀಗಾಗಿ ರಾತ್ರಿ ಮತ್ತೆ ಪೆಟ್ರೋಲ್‌ ತಂದು ಬೆಂಕಿ ಹಚ್ಚಿದ್ದ. ಆ. 19ರಂದು ಮೃತದೇಹ ಪತ್ತೆಯಾಗಿತ್ತು. ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹೆಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಆರೋಪಿಗೆ ರಕ್ತ ಕ್ಯಾನ್ಸರ್‌: ‘ಆರೋಪಿ ಚೇತನ್‌ 3ನೇ ಹಂತದ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಕ್ಯಾನ್ಸರ್‌ ಇರುವುದು ಗೊತ್ತಾದ ನಂತರ ವಿದ್ಯಾರ್ಥಿನಿ ಈತನಿಂದ ದೂರವಾಗಿದ್ದರು. ಜೊತೆಗೆ ಬೇರೊಬ್ಬ ಯುವಕನೊಂದಿಗೆ ಸಂಬಂಧ ಬೆಳೆಸಿದ್ದರು. ಇದು ಚೇತನ್‌ಗೆ ಕೋಪ ತರಿಸಿತ್ತು. ಗರ್ಭಿಣಿಯಾಗಿರುವ ವಿಷಯ ತಿಳಿದು ಮದುವೆಯಾಗುವಂತೆ ಒತ್ತಾಯಿಸಿದಾಗ ಗರ್ಭದಲ್ಲಿರುವ ಮಗು ತನ್ನದಾ ಎಂಬ ಅನುಮಾನ ಕಾಡಿತ್ತು. ಈ ಎಲ್ಲಾ ಕಾರಣಗಳಿಂದ ಕೊಲೆ ಮಾಡಿದ್ದಾನೆ’ ಎಂದು ತಿಳಿಸಿದರು.

ಡಿಎನ್‌ಎ ಪರೀಕ್ಷೆಗೆ ಸಿದ್ಧತೆ : ‘ವರ್ಷಿತಾ ಬೇರೊಬ್ಬ ಯುವಕನ ಜೊತೆ ಸಂಬಂಧ ಬೆಳೆಸಿದ್ದಳು. ಆಕೆಯ ಗರ್ಭದಲ್ಲಿರುವ ಭ್ರೂಣ ತನ್ನದಲ್ಲ. ತನ್ನನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ. ಈ ಕುರಿತ ಗೊಂದಲ ನಿವಾರಣೆಗಾಗಿ ಆರೋಪಿ ಹಾಗೂ ಭ್ರೂಣದ ಡಿಎನ್‌ಎ ಪರೀಕ್ಷೆ ಮಾಡಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

 

Share this article

ಟಾಪ್ ನ್ಯೂಸ್

More News