ಜನವಾಹಿನಿ News ಮಡಿಕೇರಿ: ಜಿಲ್ಲಾಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಕ್ರೈಸ್ತ ಬಾಂಧವರು ಯೇಸುವಿನ ಜನ್ಮದಿನ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ, ಸಿದ್ದಾಪುರ ಸೇರಿದಂತೆ ವಿವಿಧೆಡೆ ಕ್ರೈಸ್ತ ಬಾಂಧವರು ಚರ್ಚ್ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಸಂತ ಮೈಕಲರ ಚರ್ಚ್, ಸಿಎಸ್ಐ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಬೆಳಗ್ಗಿನಿಂದಲೇ ಪೂಜೆ, ಬೈಬಲ್ ಪಠಣ, ಸಾಮೂಹಿಕ ಗಾಯನ ನಡೆದವು.
ಚರ್ಚ್ನ ಒಳಗೆ ಹಾಗೂ ಹೊರಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕ್ರಿಸ್ಮಸ್ ಟ್ರೀ, ಏಸುವಿನ ಪ್ರತಿಮೆಯನ್ನು ವೈವಿಧ್ಯಮಯವಾಗಿ ಅಲಂಕರಿಸಲಾಗಿತ್ತು. ಸಾವಿರಾರು ಸಂಖ್ಯೆಯ ಕ್ರೈಸ್ತ ಬಾಂಧವರು ಚರ್ಚ್ಗಳಿಗೆ ಆಗಮಿಸಿ ಏಸುವನ್ನು ಪ್ರಾರ್ಥಿಸಿದರು. ಕ್ರೈಸ್ತ ಬಾಂಧವರ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.
ಬುಧವಾರ ರಾತ್ರಿಯಿಂದಲೇ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿರುವ ಗೋದಲಿಯ ದೀಪಾಲಂಕಾರವನ್ನು ಜನರು ವೀಕ್ಷಿಸುತ್ತಿದ್ದರು. ಬಾಲ ಯೇಸುವಿನ ಜನ್ಮ ವೃತ್ತಾಂತವನ್ನು ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಸಾಂತಾಕ್ಲಾಸ್ ವೇಷ ಧರಿಸಿದ ಪುಟಾಣಿಗಳು ಮನೆಮನೆಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಮತ್ತೆ ಕೆಲವು ಪುಟಾಣಿ ಮಕ್ಕಳು ಸಾಂತಾಕ್ಲಾಸ್ ವೇಷ ಧರಿಸಿ ಚರ್ಚ್ಗೆ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಕೇಕ್ ಹಂಚಿ ಹಬ್ಬದ ಶುಭಾಶಯ ಕೊರುತ್ತಿದ್ದರು. ಹಬ್ಬದ ಅಂಗವಾಗಿಯೇ ನಗರದ ಕೆಲವು ಬೇಕರಿಗಳಲ್ಲಿ ಹಲವು ಬಗೆಬಗೆಯ ಕೇಕ್ಗಳನ್ನು ತಯಾರಿಸಲಾಗಿತ್ತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚ್ಗಳಲ್ಲಿ ಹಲವು ವಿಶೇಷ ಕಾರ್ಯಕ್ರಮ ನಡೆಯಿತು. ಹಬ್ಬದ ಅಂಗವಾಗಿ ಬುಧವಾರ ರಾತ್ರಿಯೇ ಕ್ರಿಸ್ಮಸ್ ಗೀತೆ, ಬಲಿಪೂಜೆ ಜರುಗಿತು.







