ಜನವಾಹಿನಿ News ಮಡಿಕೇರಿ : ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಅಜ್ಞಾತ ದಿಕ್ಕಿನಿಂದ ಹಾರಿಬಂದ ಗುಂಡು ತಗಲಿ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ನಡೆದಿದೆ.
ಪುಲಿಯೇರಿ ಗ್ರಾಮ ವ್ಯಾಪ್ತಿಗೆ ಒಳಪಡುವ ಆನಂದಪುರದ ನಿವಾಸಿ ಆನೆಸ್ಡಿಕುಂಞ (63) ಎಂಬುವರು ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯಕ್ಕೆ ತಮ್ಮಮನೆಯ ಹಿಂಭಾಗದಲ್ಲಿ ಅವರ ತೋಟದಿಂದ ಬಚ್ಚಲೂ ಕೊಠಡಿಗೆ ಸೌದೆಗಳನ್ನು ತೆಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ದಿಡೀರನೆ ತೂರಿ ಬಂದ ಗುಂಡು(ಚಿಲ್ಲು) ತಗಲಿ ಎದೆ ಭಾಗಕ್ಕೆ ಕಾಲಿಗೆ ಗಂಭೀರ ಗಾಯವಾಗಿದ್ದು ಕೂಡಲೆ ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ರಿ ತಕ್ಷಣವೇ ಸ್ಥಳೀಯರ ನೆರವಿನಿಂದ ಅಮ್ಮತ್ತಿ ಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಡಹಗಲೇ ನಡೆದಿರೋ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಈ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಗೆ ಮಾಹಿತಿ ಬಂದ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪ್ರಕರಣ ತನಿಖೆ ಕೈಗೊಂಡರು.
ಮೂಲಗಳ ಪ್ರಕಾರ ಪಕ್ಕದ ಮನೆಯ ವ್ಯಕ್ತಿ ತಾನು ಸಾಕುತ್ತಿದ್ದ ಕೋಳಿಯನ್ನು ಬೇಟೆಯಾಡಲು ಬಂದಿದ್ದ ಮುಂಗುಸಿಗೆ ಗುಂಡು ಹಾರಿಸಿದ್ದು, ಗುಂಡು ಪಕ್ಕದ ಮನೆಯ ವ್ಯಕ್ತಿಗೆ ತಗುಲಿದೆ ಎನ್ನಲಾಗಿದೆ. ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾದ ಮಾಹಿತಿ ಲಭಿಸಬೇಕಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಮಡಿಕೇರಿ ವ್ರತ ನಿರೀಕ್ಷಕ ರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಸಮಗ್ರ ತನಿಖೆ ನಡೆಸಲು ಸೂಚಿಸಿದ್ದಾರೆ.







