ಜನವಾಹಿನಿ News ಮಡಿಕೇರಿ : ಇತ್ತೀಚೆಗೆ ನಾಪೋಕ್ಲು ಪಟ್ಟಣದಲ್ಲಿ ಹಿಂದೂ ಯುವಕನ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಬಹುಸಂಖ್ಯಾತ ಹಿಂದೂ ಸಮಾಜವನ್ನು ಸಂಘಟಿಸಿ ಜಾಗೃತಗೊಳಿಸುವ ಉದ್ದೇಶದಿಂದ ಏ.೧ ರಂದು ನಾಪೋಕ್ಲು ಪಟ್ಟಣದಲ್ಲಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಬೃಹತ್ ಹಿಂದೂ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಸಂಯೋಜಕ ಲವ ನಾಣಯ್ಯ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಶತಾಬ್ಧಿ ಹಿನ್ನೆಲೆಯಲ್ಲಿ ದೇಶಾದ್ಯಂತ ಇತ್ತೀಚೆಗೆ ಹಿಂದೂ ಸಮಾಜೋತ್ಸವ ಮತ್ತು ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಸಂಘಟಿತ ಹಿಂದೂ ಸಮಾಜವು ಒಟ್ಟಾಗಿ ಆಯೋಜನೆ ಮಾಡಿತ್ತು. ಆದರೆ, ಬಲ್ಲಮಾವಟಿ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಸಂದರ್ಭ ಕಾರ್ಯಕ್ರಮದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬಲ್ಲಮಾವಟಿಯ ಹಿಂದೂ ಕಾರ್ಯಕರ್ತ ಗೌತಮ್ ಎಂಬವರ ಮೇಲೆ ಸಮಾಜಘಾತಕ ಯುವಕರ ತಂಡ ಹಲ್ಲೆ ನಡೆಸಿರುವುದು ತೀವ್ರ ಖಂಡನೀಯವಾಗಿದೆ. ಈ ಹಿನ್ನೆಲೆ ಹಿಂದೂ ಸಮಾಜ ಜಾಗೃತಗೊಳಿಸುವ ನಿಟ್ಟಿನಲ್ಲಿ ನಾಪೋಕ್ಲುವಿನ ಹಳೇ ತಾಲೂಕು ಜಂಕ್ಷನ್ನಲ್ಲಿ ಬೆಳಗ್ಗೆ ೧೦ ಗಂಟೆಗೆ ಬೃಹತ್ ಹಿಂದೂ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಿತಿ ಸಹಸಂಚಾಲಕ ಕುಕ್ಕೆರ ಅಜಿತ್ ಮಾತನಾಡಿ, ಪ್ರಸ್ತುತ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹಿಂದುಗಳು ಭಯಭೀತರಾಗಿ ಬದುಕುವ ಸನ್ನಿವೇಶ ಸೃಷ್ಟಿಸುತ್ತಿರುವುದು ಗೋಚರಿಸುತ್ತಿದೆ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆಯು ಹೆಚ್ಚುತ್ತಿದೆ. ಮಾರುಕಟ್ಟೆ ಇನ್ನಿತರ ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ವ್ಯಾಪಾರ, ಗಾಂಜಾ ಮಾರಾಟ, ಗೋ ಹತ್ಯೆಯಂತಹ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಇಂತಹ ದುಷ್ಟ ಶಕ್ತಿಗಳನ್ನು ಸದೆ ಬಡಿದು, ದೇಶದ್ರೋಹಿ, ಸಮಾಜಘಾತಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಹಸಂಚಾಲಕರಾದ ಪ್ರತೀಪ್, ಬಾಲಕೃಷ್ಣ ರೈ, ಸದಸ್ಯರಾದ ಪ್ರತಿಭಾ ಅಚ್ಚಪ್ಪ, ಚಂದ್ರ ಉಡೋತ್ತು ಇದ್ದರು.







