ಕುಡಿಯ ಸಮುದಾಯದ ಯುವಕರ ಕಾರ್ಯಾಚರಣೆ ಯಶಸ್ವಿ
ಜನವಾಹಿನಿ News ಮಡಿಕೇರಿ : ಕೊಡಗಿನ ಅತಿ ಎತ್ತರದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಜಿ.ಎಸ್.ಶರಣ್ಯ(36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಶರಣ್ಯ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ತಡಿಯಂಡಮೋಳ್ ಬೆಟ್ಟದ ಟ್ರೆಕ್ಕಿಂಗ್ ಪಾಯಿಂಟ್ ನಿಂದ 3.5 ಕಿ.ಮೀ ದೂರದ ಮಲೆ ತಿರಿಕೆ ಎಂಬ ಅರಣ್ಯದೊಳಗೆ ಸುರಕ್ಷಿತವಾಗಿದ್ದ ಶರಣ್ಯ ಅವರನ್ನು ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಪತ್ತೆ ಹಚ್ಚಿ ಕರೆತಂದಿದ್ದಾರೆ.
ತಡಿಯಂಡಮೋಳ್ ಬೆಟ್ಟದ ಸಂಪೂರ್ಣ ಮಾಹಿತಿ ಹೊಂದಿದ್ದ ಸ್ಥಳೀಯ ಕುಡಿಯ ಬುಡಕಟ್ಟು ಸಮುದಾಯದ ಯುವಕರ ತಂಡ ಇಂದು ಸಂಜೆ ವೇಳೆಗೆ ಮಲೆ ತಿರಿಕೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶರಣ್ಯ ಇರುವುದನ್ನ ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಬಳಿಕ ಯುವಕರು ರಕ್ಷಣಾ ತಂಡಗಳಿಗೆ ಮಾಹಿತಿ ರವಾನಿಸಿದ್ದಾರೆ. ಆಹಾರವಿಲ್ಲದೆ ಬಳಲಿದ್ದ ಶರಣ್ಯ ಅವರನ್ನು ಉಪಚರಿಸಿದ ವಿವಿಧ ಇಲಾಖೆಗಳ ರಕ್ಷಣಾ ತಂಡ ಟ್ರೆಕ್ಕಿಂಗ್ ಪಾಯಿಂಟ್ ಪ್ರವೇಶ ದ್ವಾರಕ್ಕೆ ಕರೆ ತಂದರು.

ಏಕಾಂಗಿಯಾಗಿದ್ದ ಶರಣ್ಯ ::
ಕಕ್ಕಬ್ಬೆ ಸಮೀಪದ ಕಬ್ಬಿನಕಾಡುವಿನ ಹೋಂಸ್ಟೇಗೆ ಎ.1ರಂದು ಬಂದಿದ್ದ ಶರಣ್ಯ ಎ.2ರಂದು ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ್ದರು.
ಏಕಾಂಗಿಯಾಗಿ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇತರ ಚಾರಣಿಗರ ಜೊತೆಯಲ್ಲಿ ಶರಣ್ಯ ಅವರನ್ನು ಬೆಟ್ಟಕ್ಕೆ ತೆರಳಲು ಅನುಮತಿ ನೀಡಿದ್ದರು. ಶರಣ್ಯ ಜೊತೆಯಲ್ಲಿ ಟ್ರೆಕ್ಕಿಂಗ್ ತೆರಳಿದ್ದ ಎಲ್ಲಾ ಚಾರಣಿಗರು ಸಂಜೆ ಮರಳಿದ್ದರೂ ಶರಣ್ಯ ಮಾತ್ರ ವಾಪಾಸಾಗಿರಲಿಲ್ಲ.
ಈ ನಡುವೆ ಅರಣ್ಯದಲ್ಲಿ ದಾರಿ ತಪ್ಪಿರುವುದಾಗಿ ಶರಣ್ಯ ಹೋಂ ಸ್ಟೇ ಮಾಲಕರಿಗೆ ಮಾಹಿತಿ ನೀಡಿದ್ದರು. ಬಳಿಕ ಅರಣ್ಯ ಇಲಾಖೆ, ನಾಪೋಕ್ಲು ಪೊಲೀಸರು, ಸ್ಥಳೀಯ ಗ್ರಾಮಸ್ಥರು ಎ.2ರ ಮಧ್ಯರಾತ್ರಿ 12 ಗಂಟೆಯವರೆಗೆ ತೀವ್ರ ಹುಡುಕಾಟ ನಡೆಸಿದ್ದರೂ ಆಕೆ ಪತ್ತೆಯಾಗಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ನಾಪೋಕ್ಲು ಪೊಲೀಸರು, ತಾಂತ್ರಿಕ ತಂಡ, ನಕ್ಸಲ್ ನಿಗ್ರಹ ದಳ, ಶ್ವಾನದಳ, ದ್ರೋಣ್ ಮತ್ತು ಸ್ಥಳೀಯ ಕುಡಿಯ ಬುಡಕಟ್ಟು ಸಮುದಾಯದ ಯುವಕರ ತಂಡದ ಸಹಕಾರದಿಂದ ದಟ್ಟ ಕಾಡು, ಕಣಿವೆಯ ನೂರಾರು ಎಕರೆ ಪ್ರದೇಶದಲ್ಲಿ ಶೋಧ ನಡೆಸಿದರು.
4ನೇ ಪ್ರಕರಣ ::
ತಡಿಯಂಡಮೋಳ್ ಬೆಟ್ಟದ ಚಾರಣ ಹಾದಿ ಕಷ್ಟಕರವಾಗಿಲ್ಲವಾದರೂ ಈ ಹಿಂದೆ ಕೆಲವು ಮಂದಿ ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿದ ಘಟನೆ ನಡೆದಿದೆ. ಬೆಂಗಳೂರು ಮೂಲದ ದಂಪತಿ ಚಾರಣಕ್ಕೆ ಆಗಮಿಸಿ ಕಾಡಿನಲ್ಲಿ ಸಿಲುಕಿದ್ದರು. ಈ ಮಾಹಿತಿ ಅರಿತ ಸ್ಥಳೀಯ ಗ್ರಾಮಸ್ಥರು ಮರು ದಿನ ಅವರನ್ನು ರಕ್ಷಿಸಿದ್ದರು. ಬೆಂಗಳೂರು ಮೂಲದ ಯುವಕನೊಬ್ಬ ಇದೇ ಬೆಟ್ಟಕ್ಕೆ ಚಾರಣಕ್ಕೆ ಆಗಮಿಸಿ ಬಳಿಕ ದಾರಿ ತಪ್ಪಿದ್ದು, ಮರು ದಿನ ಗ್ರಾಮಸ್ಥರೇ ಕರೆ ತಂದಿದ್ದರು. ಕೆಲವು ಸಮಯದ ಹಿಂದೆ ಚಾರಣಕ್ಕೆ ತೆರಳಿದ ವ್ಯಕ್ತಿಯೊಬ್ಬರು ಬೆಟ್ಟದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದರು. ಆ ಸಂದರ್ಭವೂ ಗ್ರಾಮಸ್ಥರು ಮತ್ತು ನಾಪೋಕ್ಲು ಪೊಲೀಸರು ಬೆಟ್ಟದ ತಪ್ಪಲಿನಿಂದ ವ್ಯಕ್ತಿಯ ಮೃತದೇಹವನ್ನು ಹೊತ್ತು ತಂದಿದ್ದರು. ತಡಿಯಂಡಮೋಳ್ ಬೆಟ್ಟದಲ್ಲಿ ದಾರಿ ತಪ್ಪಿದ್ದ ಶರಣ್ಯ ಅವರದ್ದು 4ನೇ ಪ್ರಕರಣವಾಗಿದೆ.







