Breaking News :

ಮೂರ್ನಾಡು ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ಬ್ಯಾಗ್ ವಿತರಣೆ

 


ಜನವಾಹಿನಿ NEWS ಮೂರ್ನಾಡು : ಇಲ್ಲಿನ ಮೂರ್ನಾಡು ಪ್ರೌಢಶಾಲೆಯ ೧೯೯೩-೧೯೯೫ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗದ ವತಿಯಿಂದ ಮೂರ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ಜರುಗಿತು.

ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಅವರು ಮಾತನಾಡಿ ಸಮಾನ ಮನಸ್ಕ ವ್ಯಕ್ತಿಗಳಿಂದ ರೂಪುಗೊಳ್ಳುವ ಸಂಘಟನೆಗಳು ಸದೃಢತೆಯಿಂದ ಕೂಡಿರುತ್ತದೆ. ಇಲ್ಲಿ ಜಾತಿ, ಧರ್ಮ, ಬಡವ, ಬಲ್ಲಿದ ಅನ್ನೋ ತಾರತಮ್ಯ ಇರುವುದಿಲ್ಲ. ಸಂಘಟನೆಗಳು ಸೇವಾ ಮನೋಭಾವನೆಯಿಂದ ಸಮಾಜಕ್ಕೆ ಸದುಪಯೋಗವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಗ ಸಮಾಜದಲ್ಲಿ ಉತ್ತಮ ಸಂಘಟನೆಯಿದು ಎಂದು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಘದಲ್ಲಿ ಕ್ರೂಢೀಕರಣವಾಗುವ ಹಣದಲ್ಲಿ ಶೇ೩೦ರಷ್ಟು ಸೇವೆಗೆ ವಿನಿಯೋಗಿಸಿದಷ್ಟರೆ ಸಾಕು. ಉಳಿದ ಹಣದಲ್ಲಿ ಸದಸ್ಯರ ಕ್ಷೇಮಾಭಿವೃದ್ದಿ ಹಾಗೂ ಮನರಂಜನೆಯ ನಿಮಿತ್ತ ಮೀಸಲಿಡಬಹುದು.ವಿದ್ಯಾರ್ಥಿಗಳ ವಿದ್ಯಾಭ್ಯಾಸವಧಿಯಲ್ಲಿ ಹಲವಾರು ತಪ್ಪುಗಳು ಘಟಿಸುತ್ತದೆ. ಆದರೆ ಅವುಗಳನ್ನು ತಿದ್ದಿಕೊಳ್ಳುವುದರ ಮೂಲಕ ಯಶಸ್ಸನ್ನು ಕಾಣಬೇಕು ಮತ್ತು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಈಗತಾನೆ ನಿವೃತ್ತಿ ಹೊಂದಿದ ಮೂರ್ನಾಡು ಪ್ರೌಢಶಾಲೆಯ ಶಿಕ್ಷಕ ಹೆಚ್.ಬಿ. ಕೃಷ್ಣಪ್ಪ ಮತ್ತು ಕಚೇರಿ ಸಹಾಯಕ ಚನ್ನಪ್ಪ ಅವರನ್ನು ಬಳಗದ ವತಿಯಿಂದ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗದ ಸದಸ್ಯರಾದ ಲತೀಫ್, ರೂಪಶ್ರೀ, ಶ್ವೇತ ಮತ್ತು ಬಾಲಕೃಷ್ಣ ಅವರುಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಬಿ.ಎ. ಕೇಶವ, ಪಾರೆಮಜಲು ಅಶೋಕ್ ಎಂ.ಎಸ್. ಸಮೀರ್ ಮತ್ತು ದೇವಿಪ್ರಸಾದ್ ಉಪಸ್ಥಿತರಿದ್ದರು.

ಪ್ರೌಢಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ಪ್ರಕೃತಿರಶ್ಮಿ ವಿದ್ಯಾರ್ಥಿ ಬಳಗದ ಸದಸ್ಯರು ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು. ಹಾಗೆಯೆ ಪ್ರಸ್ತುತ ೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ತಲಾ ಮೂರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಭವಿಷ್ಯ ಮತ್ತು ವರುಣ್ಯ ಸ್ವಾಗತ ನೃತ್ಯ ಮತ್ತು ಅನುಪದ ನಾಗರಾಜ್ ಭರತನಾಟ್ಯಂ ಪ್ರದರ್ಶನ ನೀಡಿದರು. ಕುಶಾಲನಗರದಿಂದ ಆಗಮಿಸಿದ್ದ ರೂಪಶ್ರೀ ವಿದ್ಯಾರ್ಥಿಗಳು ಗಾಂಧಾರ ವಿದ್ಯೆಯ ಪ್ರದರ್ಶನ ನೀಡಿದರು.

ಪ್ರಕೃತಿ ರಶ್ಮಿ ಬಳಗದ ಜಲಜ ನಾಗರಾಜ್ ಪ್ರಾರ್ಥಿಸಿ, ಶಾಲಾ ಸಹ ಶಿಕ್ಷಕಿ ಸುಜಾತ ಸ್ವಾಗತಿಸಿ, ಅನುಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

✍🏼 : ಟಿ.ಸಿ.ನಾಗರಾಜ್, ಮೂರ್ನಾಡು.

Share this article

ಟಾಪ್ ನ್ಯೂಸ್

More News