Breaking News :

ಆದಿವಾಸಿಗಳ ವಿವಿಧ ಬೇಡಿಕೆ ಆಲಿಸಿದ ಜಿಲ್ಲಾಧಿಕಾರಿ ಸೋಮಶೇಖರ್

 


ಜನವಾಹಿನಿ News ಮಡಿಕೇರಿ : ನಾಗರಹೊಳೆಯ ಆದಿವಾಸಿ ನಿವಾಸಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದು, ಈ ಹಿನ್ನೆಲೆ ಅರಣ್ಯ ಹಕ್ಕು ಕಾಯ್ದೆಯಡಿ ಮತ್ತೊಮ್ಮೆ ಪರಿಶೀಲಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾಗರಹೊಳೆ ಭಾಗದ ಹಾಡಿಗಳಲ್ಲಿನ ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳ ವಿಲೇವಾರಿ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಹಾಡಿ ಮುಖಂಡರು ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.

ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿ ಸದಸ್ಯರಾದ ನಾಣಚ್ಚಿ ಗದ್ದೆಹಾಡಿಯ ರಮೇಶ್, ಬ್ರಹ್ಮಗಿರಿ-ಕಾಂತೂರು ಹಾಡಿಯ ಪ್ರಕಾಶ್ ಹಾಗೂ ಮುತ್ತಪ್ಪ ಅವರು ಮಾತನಾಡಿ, ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮಗಿರಿ ಕಾಂತೂರು-ಹಾಡಿಯ ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸಿ ಹಕ್ಕು ಪತ್ರ ವಿತರಿಸಲು ಕೋರಿದರು.

ನಾಗರಹೊಳೆ ಹಾಡಿಯ ತಿಮ್ಮ ಹಾಗೂ ಶಿವು ಮಾತನಾಡಿ, ಜಿಲ್ಲೆಯ ಪಿವಿಟಿಜಿ ಜನಾಂಗದವರಿಗೆ ಹ್ಯಾಬಿಟೇಟ್ ಹಕ್ಕು ನೀಡಲು, ಸಮುದಾಯ ಹಕ್ಕುಗಳಿಗೆ ಹಕ್ಕು ಪತ್ರ ವಿತರಿಸಲು ಕೋರಿದರು. ಅಲ್ಲದೇ ಸಾಕ್ಷ್ಯ ಲಭ್ಯವಿಲ್ಲವೆಂದು ತಿರಸ್ಕರಿಸಿರುವ ಅರ್ಜಿಗಳ ಸ್ಥಳ ಮಹಜರು ಮಾಡಿ ಹಕ್ಕು ಪತ್ರ ವಿತರಿಸುವಂತೆ ಕೋರಿದರು.

ಮುಖಂಡರಾದ ಪುಷ್ಪ ಅವರು ಮಾತನಾಡಿ, ದೇವರಪುರ ದೇವರಕಾಡು ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸುವಂತೆ ಕೋರಿದರು.

ಬೊಮ್ಮಾಡು ಹಾಡಿಯ ಸೋಮಯ್ಯ ಮಾತನಾಡಿ, ಈಗಾಗಲೇ ನೀಡಿರುವ ಹಕ್ಕು ಪತ್ರದಲ್ಲಿನ ಜಾಗದ ವಿಸ್ತೀರ್ಣದಲ್ಲಿ ಅನ್ಯಾಯವಾಗಿದೆ ಮತ್ತೊಮ್ಮೆ ಪರಿಶೀಲಿಸಿ ಹಕ್ಕು ಪತ್ರ ಸರಿಪಡಿಸುವಂತೆ ಕೋರಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು.

ಅಲ್ಲದೆ ಪ್ರತಿ ತಿಂಗಳು ತಾಲ್ಲೂಕು ಮಟ್ಟದಲ್ಲಿ ಆದಿವಾಸಿಗಳ ಕುಂದುಕೊರತೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಇಲಾಖಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ತೇಜರಾಜು, ಸಿದ್ದೇಗೌಡ, ಬಾಲಕೃಷ್ಣ ರೈ, ಹಾಡಿ ಮುಖಂಡರುಗಳಾದ ರಮೇಶ್, ಪ್ರಕಾಶ್, ತಿಮ್ಮ, ಶಿವು, ಕಾಳ, ಸೋಮಯ್ಯ, ಪುಷ್ಪ ಸೇರಿದಂತೆ ಇತರರು ಹಾಜರಿದ್ದರು.

Share this article

ಟಾಪ್ ನ್ಯೂಸ್