ಜನವಾಹಿನಿ News ಸಿದ್ದಾಪುರ :: ಇಲ್ಲಿಗೆ ಸಮೀಪದ ಇಂಜಲಗೆರೆ ಶ್ರೀ ಪೂಮಡಪುರ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಗುರುವಾರ ಸಂಜೆ ಪುತ್ತರಿ ವೆಳ್ಳಾಟಂ ಶ್ರದ್ದಾಭಕ್ತಿಯಿಂದ ನಡೆಯಿತು.
ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಹುತ್ತರಿ ಹಬ್ಬದ ಪ್ರಯುಕ್ತ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ, ಕಾರ್ಯಕ್ರಮದಲ್ಲಿ ಇಂಜಲಗೆರೆ, ಪುಲಿಯೇರಿ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಮುತ್ತಪ್ಪ ಸ್ವಾಮಿ, ವಸೂರಿಮಾಲ ಹಾಗೂ ಗುಳಿಗ ದೈವಗಳ ವೆಳ್ಳಾಟಂ ಕಣ್ತುಂಬಿಸಿಕೊಂಡರು.
ವೆಳ್ಳಾಟಂ ನಂತರ ಭಕ್ತರು ಮುತ್ತಪ್ಪ ಸ್ವಾಮಿ, ಗುಳಿಗ ದೈವಗಳ ಬಳಿ ತಮ್ಮ ಕಷ್ಟ-ಸುಖ ಹಂಚಿಕೊಂಡು ಪರಿಹಾರ ಪಡೆದುಕೊಂಡು ಕೃತಾರ್ಥರಾದರು. ದೇವಾಲಯ ಆವರಣದಲ್ಲಿ ಕದಿರು ತೆಗೆದ ಬಳಿಕ ಎಲ್ಲಾ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯ ಸಮಿತಿ ಸದಸ್ಯರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









