ಜನವಾಹಿನಿ NEWS ಮಡಿಕೇರಿ : ಕಕ್ಕಡ 18 ರ ಪ್ರಯುಕ್ತ ಸೋಮವಾರ ಕೊಡಗಿನ ಮನೆ ಮನೆಗಳಲ್ಲಿ ಮದ್ದು ಸೊಪ್ಪಿನ ಪಾಯಸ ಘಮಘಮಸುತ್ತಿತ್ತು.
ಮುಂಗಾರಿನ ಆಷಾಡ ಮಾಸದಲ್ಲಿ ಕೃಷಿಚಟುವಟಿಕೆಗಳಲ್ಲಿ ಮಗ್ನರಾಗುವ ರೈತಾಪಿ ವರ್ಗದ ಆರೋಗ್ಯ ಸಂರಕ್ಷಣೆಯಲ್ಲಿ ಜಾನಪದ ಆಚರಣೆಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಅಂತಹ ಒಂದು ಕೊಡಗಿನ ವಿಶಿಷ್ಟ ಆಚರಣೆಯಾಗಿರುವ, ಕೊಡವ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿರೋ `ಕಕ್ಕಡ ಪದಿನೆಟ್ಟ್’ನ್ನು ಜಿಲ್ಲೆಯ ಸರ್ವಜನಾಂಗ ಬಾಂಧವರು ಸಾಂಪ್ರದಾಯಿಕವಾಗಿ ಆಚರಿಸಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಂಡುಬರುವ 18 ಮೂಲಿಕೆಗಳ ಔಷಧಿಯ ಗುಣಗಳನ್ನು ಹೊಂದಿರುವ `ಮದ್ದ್ ಸೊಪ್ಪು’ ಆಟಿ ಪದಿನೆಟ್ಟ್ ಆಚರಣೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಅನಾದಿ ಕಾಲದಿಂದಲೂ ಹಿರಿಯರು ರೂಢಿಸಿಕೊಂಡು ಬಂದಿರುವ ಸಾಂಪ್ರದಾಯಕ ರೀತಿಯಲ್ಲೇ
ಮದ್ದ್ ಸೊಪ್ಪಿನ ರಸದಿಂದ ಪಾಯಸ, ತಟ್ಟೆ ಹಿಟ್ಟು, ಹಲ್ವ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸವಿಯುವ ಮೂಲಕ ಸಂಭ್ರಮಿಸಿದರು.
ಜಿಲ್ಲಾಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ದಿನದ ವಿಶೇಷವಾದ ಆಟಿ ಸೊಪ್ಪಿನ ಭರಾಟೆ ಜೋರಾಗಿತ್ತು . ಗ್ರಾಮೀಣ ಭಾಗದಿಂದ ತರಲಾದ ಮದ್ದಿನ ಸೊಪ್ಪನ್ನು ಮಾರಾಟ ಮಾಡಲಾಗುತ್ತಿತ್ತು. ಜನರು ಕೂಡ ಆಟಿ ಸೊಪ್ಪು ಖರೀದಿಗೆ ಮುಗಿಬೀಳುತ್ತಿದ್ದದ್ದು ಕಂಡುಬಂತು.







